ಅಂಗೈಯ್ಯಲ್ಲಿರುವ ಗುಬ್ಬಿಮರಿಗೆ ಬೆಳಕಿಂಡಿಯೊಂದು ಬೇಕಾಗಿದೆ…
‘ಇಟ್ ಇಸ್ ಜಸ್ಟ್ ಅ ಬ್ಯಾಡ್ ಡೇ, ನಾಟ್ ಅ ಬ್ಯಾಡ್ ಲೈಫ್’ ಎಂಬ ಪ್ರಸಿದ್ಧ ಇಂಗ್ಲೀಷ್ ಸಾಲೊಂದಿದೆ. ಇದನ್ನು ಯಾರು ಹೇಳಿದರೆಂದು ಸ್ಪಷ್ಟವಾಗಿ ಗೊತ್ತಿಲ್ಲವಾದರೂ ಹೀಗೆ ಹೇಳಿರುವ ಉದ್ದೇಶವಂತೂ ಸ್ಪಷ್ಟ. ಬದುಕು ಎಂದೂ ಕೆಟ್ಟದ್ದಾಗಿರಲಿಕ್ಕೆ ಸಾಧ್ಯವೇ ಇಲ್ಲ! ಕೆಟ್ಟ ಜನರಿರಬಹುದು, ಕೆಟ್ಟ ಘಟನೆಗಳಿರಬಹುದು, ಕೆಟ್ಟ ದಿನಗಳಿರಬಹುದು. ಆದರೆ ಕೆಟ್ಟ ಬದುಕು ಹೇಗಿರಲಿಕ್ಕೆ ಸಾಧ್ಯ? ಹುಟ್ಟು ಸಾವು ನಮ್ಮ ಕೈಯ್ಯಲ್ಲಿರದೇ ಹೋದರೂ ಅವೆರಡರ ನಡುವಿನ ಬದುಕೆಲ್ಲವೂ ನಮ್ಮ ಅಂಗೈಯ್ಯಲ್ಲೇ. ಇಲ್ಲಿ ತೆಗೆದುಕೊಳ್ಳುವ ನಿರ್ಧಾರವೆಲ್ಲವೂ ನಮ್ಮದೇ. ಅದರಿಂದುಂಟಾಗುವ ಸಾಧಕ ಬಾಧಕಗಳೂ ನಮ್ಮವೇ. ಕೆಲವೊಮ್ಮೆ ತೀರಾ ಭ್ರಮ ನಿರಸನವಾಗಿ ಬಿಡುತ್ತದೆ. ಏನು ಮಾಡಲು ಹೊರಟರೂ ಅರ್ಧಕ್ಕೆ ನಿಲ್ಲುತ್ತದೆ. ಶುರುವಾಗುವ ಮುನ್ನವೇ ಮುಗಿದು ಬಿಡುತ್ತದೆ. ಆಫೀಸಿನಲ್ಲಿ ಗಾಣದೆತ್ತಿನಂತೆ ದುಡಿದರೂ ಐದು ವರ್ಷಗಳ ನಂತರವೂ ಅದೇ ಸ್ಥಾನದಲ್ಲಿ, ಅದೇ ಸ್ಥಿತಿಯಲ್ಲಿದ್ದರೆ ಖಂಡಿತವಾಗಿಯೂ ಮನ ಸೋಲುತ್ತದೆ. ಸ್ವಂತ ಪರಿಶ್ರಮದಲ್ಲಿ ವ್ಯಾಪಾರವೊಂದನ್ನು ಶುರು ಮಾಡಿ ಅದು ಅಂದುಕೊಂಡಂತೆ ನಡೆಯದೇ ಎಡವುತ್ತ ಬೀಳುತ್ತ ಸಾಗತೊಡಗಿದಾಗ ನಮ್ಮ ನಿರ್ಧಾರಗಳ ಮೇಲೆಯೇ ಸಂಶಯವುಂಟಾಗುತ್ತದೆ. ಮದುವೆಯಾಗಲೆಂದು ನಿರ್ಧರಿಸಿ ಎಷ್ಟೇ ಹುಡುಕಿದರೂ ಮೆಚ್ಚುವ ಬಾಳ ಸಂಗಾತಿ ಸಿಗದೇ ಇದ್ದಾಗ ಜೀವನೋತ್ಸಾಹದ ಗುಳ್ಳೆ ಒಡೆದು ಹೋಗುತ್ತದೆ. ಮದುವೆಯ ನಂತರ ಎಷ್ಟೋ ವರ್ಷಗಳ ಪ್ರಯತ್ನದ ನಂತರವೂ ಮಕ್ಕಳಾಗದೇ ಹೋದಾಗ ಜೀವನ ಇಷ್ಟೇನಾ ಎನ್ನಿಸಿ ಬಿಡುತ್ತದೆ. ಮನಸ್ಸು ಮುದುಡುತ್ತದೆ. ಉತ್ತರವಿಲ್ಲದ ಪ್ರಶ್ನೆಗಳು ತಲೆದೋರುತ್ತವೆ. ದೊಡ್ಡ ದೊಡ್ಡ ಸಮಸ್ಯೆಗಳೇ ಆಗಬೇಕಂತಿಲ್ಲ. ಅಪ್ಪ ಬೈದಿದ್ದು, ಸ್ನೇಹಿತೆ ಮುನಿಸಿಕೊಂಡಿದ್ದು, ಸೋಷಿಯಲ್ ಮೀಡಿಯಾನಲ್ಲಿ ಯಾರೋ ಮಾಡಿದ ಅವಮಾನಿಸುವ ಕಮೆಂಟ್, ಬಂಧು ಬಳಗದ ಸಾವು, ಆತ್ಮೀಯರ ಅನಾರೋಗ್ಯ, ಹೊರದೇಶದ ಪರಿಸರ, ದೈಹಿಕ ಬೇನೆ.. ಮನಸ್ಸು ಖಿನ್ನವಾಗಲಿಕ್ಕೆ ಇದೇ ಕಾರಣ ಬೇಕು ಅಂತಿಲ್ಲ. ಅದು ಕ್ಯಾನ್ಸರಿನಂತೆ. ನಮ್ಮೊಳಗೆ ಗಂಟುಕಟ್ಟಿ ದಿನಕಳೆದಂತೆ ಹಬ್ಬಲು ಶುರು ಮಾಡುತ್ತದೆ. ಒಲೆಯ ಮೇಲಿರುವ ಸಾರಿನಂತೆ ನಿತ್ಯದ ಬದುಕನ್ನು ಜೀವಿಸುತ್ತಲೇ ನಮ್ಮೊಳಗೆ ಕುದಿಯುತ್ತಿರುತ್ತದೆ. ಕೊನೆಗೊಂದು ದಿನ ಹಾಸಿಗೆಯಿಂದ ಮೇಲೇಳಲು ಬಿಡದಷ್ಟು ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ.
ಒಂದಂತೂ ನಿಜ. ಹೀಗೆ ಆಕಾಶವೇ ತಲೆ ಮೇಲೆ ಬಿತ್ತು ಎಂದೆನ್ನಿಸಿದಾಗ ನಮ್ಮನ್ನು ಸಂಪೂರ್ಣವಾಗಿ ಎತ್ತಲು ಸಾಧ್ಯವಿರುವುದು ಕೇವಲ ನಮಗೆ ಮಾತ್ರ.

ಜೊತೆಯಿರುವವರ ಆರೈಕೆ, ಸಾಂತ್ವನ, ಸಹಾಯವೆಲ್ಲವೂ ಕಿರುಬೆರಳಾದೀತಷ್ಟೇ. ಅದರ ಸಹಾಯದಿಂದ ಎದ್ದು ನಿಲ್ಲಬೇಕಾದವರು ನಾವೇ. ಬಿದ್ದ ಮಣ್ಣಲ್ಲೇ ಮತ್ತೆ ಮೈ ಕೊಡವಿಕೊಂಡು ಮೇಲೇಳುವ ಪ್ರಯತ್ನ ಮಾಡಬೇಕು. ತಲೆಯೆತ್ತಬೇಕು. ಮುಂದೆ ಎದುರಾಗುವುದೆಲ್ಲವನ್ನು ಎದುರಿಸುವ ಗಟ್ಟಿ ಧೈರ್ಯ ಮಾಡಬೇಕು. ಇದು ಹೇಳಿದಷ್ಟು ಸುಲಭವಿಲ್ಲ. ಒಂದು ದಿನದಲ್ಲಿ ಮಾಡಿ ಮುಗಿಸುವ ಕೆಲಸವೂ ಅಲ್ಲ. ಅದು ಒಂದು ತಪಸ್ಸು. ಪ್ರತಿನಿತ್ಯವೂ, ಪ್ರತಿ ಕ್ಷಣವೂ ಮನಸ್ಸನ್ನು ಹುರಿಗೊಳಿಸಿಕೊಳ್ಳುವ ಸತತ ಪ್ರಯತ್ನ. ಮನಸೋಲದಂತೆ ಅವಡುಗಚ್ಚಿ ನಿಲ್ಲುವ ಕಲ್ಲೆದೆ. ಅದು ಪ್ರತಿ ಬೆಳಿಗ್ಗೆ ಎದ್ದೇಳಲಿಕ್ಕೆ ಮಾಡುವ ಹೋರಾಟ. ಒಂದೊಂದೇ ಹೆಜ್ಜೆ ಊರುತ್ತ ಮತ್ತೆ ನಡೆಯಲು ಕಲಿಯುವ ಅಭ್ಯಾಸ. ನಿಧಾನವಾಗಿ ನಾವು ಮತ್ತೆ ಮುಖ ಕೊಟ್ಟು ಮಾತನಾಡಲು ಶುರು ಮಾಡುತ್ತೇವೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತೇವೆ. ಇನ್ನು ಮೇಲಿಂದ ಬೇರೆ ಯಾರನ್ನೂ ನಂಬದೇ ನಮ್ಮ ಬಲದ ಮೇಲೆ, ಬುದ್ಧಿಯ ಮೇಲೆ ಬದುಕುವ ಪಾಠ ಕಲಿಯುತ್ತೇವೆ. ಖಿನ್ನತೆಯನ್ನು ಹಿಮ್ಮೆಟ್ಟಿ ಬದುಕಲು ಬದುಕಿನ ಕೆಲವು ಪಾಠಗಳನ್ನು ಅರಗಿಸಿಕೊಳ್ಳುವ ಅವಶ್ಯಕತೆಯಿದೆ ನಮಗೆಲ್ಲ.
ರಾತ್ರಿಯಾಗಬೇಕು, ಚುಕ್ಕಿ ತಾರೆ ಮಿನುಗಬೇಕು, ಮತ್ತೆ ಹೊಸ ದಿನ ಶುರುವಾಗಬೇಕು. ಇದು ಜೀವನ. ಕಾಲ ಚಕ್ರ. ಒಮ್ಮೆ ಮೇಲೆ ಮತ್ತೊಮ್ಮೆ ಕೆಳಗೆ. ಸದಾ ಚಳಿಗಾಲವೇ ಇದ್ದರೆ ಬೇಸಿಗೆಗೆ ಕಾಯುವವರು ಯಾರು? ಒಮ್ಮೆ ಶ್ರೀರಾಮನಿಗೆ ಸೀತೆ “ನೀನು ಮಹಾಪುರುಷ. ನೀನ್ಯಾಕೆ ನಿನ್ನ ಎಲ್ಲ ಪ್ರಜೆಗಳನ್ನು ಸುಖವಾಗಿಡಬಾರದು? ಕಷ್ಟಗಳೇ ಬರದಂತೆ ವರ ಕೊಡಬಾರದು” ಎಂದು ಕೇಳಿದಳಂತೆ. ಅದಕ್ಕೆ ಮುಗಳ್ನಕ್ಕ ಶ್ರೀರಾಮ ಬೇರೇನೂ ಹೇಳದೇ “ಸರಿ” ಎಂದು ಆ ಕ್ಷಣವೇ ಜನರ ಕಷ್ಟಗಳನ್ನೆಲ್ಲ ದೂರ ಮಾಡಿ, ಎಲ್ಲರಿಗೂ ಬೇಕಾದಷ್ಟು ಸಂಪತ್ತನ್ನು, ಆಹಾರವನ್ನು, ಹಣ್ಣು ಹಂಪಲು ಇತ್ಯಾದಿಗಳಿಂದ ಸುಭಿಕ್ಷ ಮಾಡಿದನಂತೆ. ಈ ಹೊಸ ಜೀವನದಿಂದ ಸಂತೃಪ್ತರಾದ ಪ್ರಜೆಗಳು ತಮ್ಮ ಸುಖದಲ್ಲೇ ಮುಳುಗಿ ಹೋದರು. ಸೋಮಾರಿಗಳಾದರು. ಅಹಂಕಾರಿಗಳಾದರು. ಇನ್ನೂ ಪರೀಕ್ಷಿಸೋಣವೆಂದ ಶ್ರೀರಾಮ ಕೆಲವರ ಮನೆಗೆ ತೂತು ಮಾಡಿದ. ಮಳೆಗಾಲದಲ್ಲಿ ಮನೆ ಸೋರಹತ್ತಿದಾಗ ಜನ ಗಾರೆ ಕೆಲಸದವರನ್ನು ಹುಡುಕಿದರೆ ಇಡೀ ರಾಜ್ಯದಲ್ಲಿ ಒಬ್ಬನೂ ಇಲ್ಲ. ಯಾಕೆಂದರೆ ಎಲ್ಲರೂ ಕೆಲಸ ಮಾಡುವ ಅಗತ್ಯವೇ ಇಲ್ಲ ಎಂದು ಹೇಳಿ ಮನೆಯಲ್ಲೇ ಕೂತು ಬಿಟ್ಟಿದ್ದಾರೆ. ಹೀಗೆ ಇನ್ನೂ ಅನೇಕ ತೊಂದರೆಗಳು ಎದುರಾದಾಗ ಸೀತೆಗೆ ಅರ್ಥವಾಗಿ ಮತ್ತೆ ಮೊದಲಿನಂತೆ ಮಾಡು ಎಂದಾಗ ಶ್ರೀರಾಮ ಹೇಳಿದನಂತೆ “ಬಂದಂತೆ ಸ್ವೀಕರಿಸುವುದೇ ಬದುಕು”. ಮುಂದೆ ವನವಾಸಕ್ಕೆ ಹೋಗುವ ಪ್ರಸಂಗ ಬಂದಾಗ ಶ್ರೀರಾಮ ಒಂದೂ ಮಾತು ಸಹ ಆಡದೇ ಅದನ್ನು ಪರಿಪಾಲಿಸಿದ್ದು ನಮಗೆಲ್ಲ ಗೊತ್ತೇ ಇದೆ.
ಕಷ್ಟಗಳು ಎದುರಾದಾಗ ಕುಗ್ಗುವುದ್ಯಾಕೆ? ಬಿರುಗಾಳಿಗೆ ಜಗ್ಗದೆ ನಿಂತಿರುವ ಮರ ನಮ್ಮಂತೆ ಅಳುತ್ತದೆಯೇ? ಈ ಸಮಯ ಸರಿದು ಹೋಗುತ್ತದೆ ಎಂದು ಮರಕ್ಕೆ ಗೊತ್ತಿರುವ ಸತ್ಯ ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತಿದೆ? ಕೆಲವೊಮ್ಮೆ ಬದುಕು ಬೆಟ್ಟದ ತುದಿಗೆ ನಿಲ್ಲಿಸಿ ಜೋರು ಗಾಳಿ ಬೀಸುತ್ತದೆ. ನಾವು ಬೀಳುತ್ತೇವೊ ಎಂದು ಪರೀಕ್ಷಿಸುತ್ತದೆ. ಗಟ್ಟಿಯಾಗಿ ನಿಂತರೆ ಬಿರುಗಾಳಿ ಕಡಿಮೆಯಾದೀತು. ಸಂಜೆಯ ಸೂರ್ಯಾಸ್ತದ ಹೊಂಬಣ್ಣ ಹರಡೀತು. ಅಷ್ಟಕ್ಕೂ ಕಷ್ಟಗಳು ನಮ್ಮ ವಿರುದ್ಧವಾಗಿವೆ ಎಂದೇಕೆ ಭಾವಿಸಬೇಕು? ನಾಳೆ ಎದುರಾಗುವ ಇನ್ನೊಂದು ಮಹಾ ಸಂಕಷ್ಟವನ್ನು ಎದುರಿಸಲಿಕ್ಕೆ ಈ ಸಣ್ಣ ಕಷ್ಟವೊಂದು ನನ್ನನ್ನು ತಯಾರು ಮಾಡುತ್ತಿದೆ ಎಂದೇಕೆ ಅಂದುಕೊಳ್ಳಬಾರದು? ಬರುವುದೆಲ್ಲ ಬರಲಿ ಎಂದು ಎದೆಯೊಡ್ಡುವ ಛಾತಿಯಿದ್ದರೆ ಯಾವುದರ ಅಂಜಿಕೆಯೇತಕೆ?
“ಕೊರತೆಯೊಂದನು ನೀನು
ನೆನೆನೆನೆದು ಕೆರಳಿ
ಧರೆಯೆಲ್ಲವನು ಶಪಿಸಿ
ಮನದಿ ನರಕವನು ನಿಲಿಸಿ
ನರಳುವುದು ಬದುಕೇನೋ? – ಮಂಕುತಿಮ್ಮ”
ಎಂದು ಡಿ.ವಿ ಗುಂಡಪ್ಪನವರು ತಮ್ಮ ಕಗ್ಗದಲ್ಲಿ ಹೇಳಿದ್ದಾರೆ. ಹೀಗೆ ನರಳುವುದರಿಂದ ಯಾರಿಗೆ ನಷ್ಟ? ನರಳುವುದರಿಂದ ಯಾರ ಕೊರತೆಗಳು ಕಡಿಮೆಯಾಗಿವೆ? ಅಲ್ಲವೇ.. ಬದುಕು ಸಹನೀಯವಾಗುವುದು ಕಷ್ಟಗಳನ್ನು ಗಟ್ಟಿಯಾಗಿ ಎದುರಿಸಿದಾಗ. ಅವುಗಳಿಂದ ಹೊಸ ಪಾಠವನ್ನು ಕಲಿತಾಗ. ಮಳೆಹನಿಗಳನ್ನು ತನ್ನೊಳಗೆ ಸೇರಿಸಿಕೊಂಡು ಹಳ್ಳವಾಗುವ ಪುಟ್ಟ ತೊರೆಯಂತೆ ಒಂದೊಂದು ಕಷ್ಟವನ್ನೂ ಜೀವನದಲ್ಲಿ ಮುಂದೆ ಹೋಗಲಿಕ್ಕೆ ಏಣಿಯನ್ನಾಗಿ ಮಾಡಿಕೊಳ್ಳುವುದು ಜಾಣತನ. ಕಷ್ಟಗಳಲ್ಲಿ ಬೆಂದವನು ಮುಂದೆ ಯಶಸ್ಸನ್ನು ಸಹ ಅಷ್ಟೇ ಸಮಚಿತ್ತದಿಂದ ಸ್ವೀಕರಿಸುತ್ತಾನೆ. ಇಳಿಜಾರಿನ ಕೊನೆಯಂಚಲ್ಲಿ ಏರು ದಾರಿ ಇದ್ದೇ ಇರುತ್ತದೆ.
“ಯಾರ ಬದುಕು ಪರಿಪೂರ್ಣವಲ್ಲ”. ಈ ಸಾಲನ್ನು ಓದಲಿಕ್ಕೆ ಎಷ್ಟು ನಿಮಿಷ ಬೇಕು? ಅರೆಕ್ಷಣವೂ ಬೇಕಾಗಿಲ್ಲ. ಆದರೆ ಅರ್ಥ ಮಾಡಿಕೊಳ್ಳಲಿಕ್ಕೆ? ಇಡೀ ಜೀವಮಾನ ಕಳೆಯಬೇಕಾದೀತು. ಅವರು ನಗುತ್ತಿದ್ದಾರೆಂದ ಮಾತ್ರಕ್ಕೆ ಅವರ ಜೀವನದಲ್ಲಿ ಎಲ್ಲವೂ ಸರಿಯಿದೆ ಎಂದು ಅಂದುಕೊಳ್ಳುವ ನಾವೆಷ್ಟು ಮುಟ್ಠಾಳರು? ಅವರ ಮಡಿಲಿನಲ್ಲಿರುವ ಕೆಂಡ ನಮಗೆ ಕಂಡಿತಾದರೂ ಹೇಗೆ? ಈಗೀಗ ಎಲ್ಲವನ್ನು ಎಲ್ಲರೂ ಮಾಡಲೇಬೇಕು. ಅವರು ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದರೆ ನಾನೂ ಹಾಕಬೇಕು. ರೀಲ್ಸ್ ಮಾಡಿದರೆ ನಾನೂ ಮಾಡಬೇಕು. ಮನೆ ಕೊಳ್ಳಬೇಕು, ಎರಡು ಮೂರು ಸೈಟು ಇರಲೇಬೇಕು. ನಾನೂ ವಿದೇಶಕ್ಕೆ ಹೋಗಬೇಕು. ಈ ಪಟ್ಟಿ ಮುಗಿಯುವುದೇ ಇಲ್ಲ. ನಮಗೆ ಸಂತೃಪ್ತಿ ಎಂಬ ಪದದ ಅರ್ಥವೇ ಗೊತ್ತಿಲ್ಲ. “ಬದುಕು ನಮಗೆಷ್ಟು ಕೊಟ್ಟಿದೆ ಎಂಬುದು ಪ್ರಶ್ನೆಯಲ್ಲ. ಬದುಕು ಕೊಟ್ಟಿದ್ದರಲ್ಲಿ ನಾವೇನು ಮಾಡುತ್ತೇವೆ ಎಂಬುದು ನಮ್ಮನ್ನು ಮತ್ತೊಬ್ಬ ವ್ಯಕ್ತಿಯಿಂದ ಪ್ರತ್ಯೇಕವಾಗಿಸುತ್ತದೆ” ಎಂಬ ಸಾಲು ಪ್ರಸಿದ್ದ ಸಿನಿಮಾ ‘ದಿ ಪರ್ಸ್ಯುಟ್ ಆಫ್ ಹ್ಯಾಪಿನೆಸ್’ ನಲ್ಲಿ ಕೇಳಿ ಬರುತ್ತದೆ. ಹೌದಲ್ಲವೇ? ಬದುಕು ನಮ್ಮ ಬೊಗಸೆಯೊಳಗಿನ ಮಳೆ. ನಮಗೆ ದಕ್ಕಿದಷ್ಟು. ಇದು ಯಾಕೆ ನಮಗೆ ಅರ್ಥವಾಗುವುದೇ ಇಲ್ಲ?
ಈಗೀಗ ನಮಗೆ ಎಲ್ಲವೂ ಇನಸ್ಟಂಟ್ ಬೇಕು. ಇನಸ್ಟಂಟ್ ಕಾಫಿ, ಇನಸ್ಟಂಟ್ ದೋಸೆ ಹಿಟ್ಟು, ಇನಸ್ಟಂಟ್ ಹೋಳಿಗೆ.. ಹಾಗೆ ಇನಸ್ಟಂಟ್ ಪ್ರತಿಫಲವನ್ನೂ ಸಹ ಬಯಸುತ್ತಿದ್ದೇವೆ. ಇವತ್ತು ಒಂದು ಕತೆ ಬರೆದರೆ ನಾಳೆ ಅದು ಪ್ರಕಟವಾಗಲೇ ಬೇಕು. ಒಂದು ತಿಂಗಳ ಹಿಂದೆ ಸೇರಿರುವ ಕೆಲಸಕ್ಕೆ ಕೂಡಲೇ ಹೈಕ್ ಸಿಗಬೇಕು. ಏನಾಗಿದೆ ನಮಗೆಲ್ಲ? ವರ್ಷಾನುಗಟ್ಟಲೇ ಧ್ಯಾನಿಸಿ, ಸಿದ್ಧಿ ಪಡೆದ ಅದೆಷ್ಟೋ ಮಹಾತ್ಮರ ನೆಲ ನಮ್ಮದು. ನಮಗೇಕೆ ಧ್ಯಾನದ ಹಂಗಿಲ್ಲ? ಒಂದು ವಿಷಯವನ್ನು ಪೂರ್ತಿಯಾಗಿ ತಿಳಿದುಕೊಂಡು ಆಮೇಲೆ ಪ್ರತಿಕ್ರಿಯಿಸುವ ವ್ಯವಧಾನವಿಲ್ಲ? ಒಂದು ಕಲೆಯನ್ನು ಅಭ್ಯಸಿಸಿ ಅದರಲ್ಲಿ ಪ್ರಾವೀಣ್ಯತೆ ಪಡೆಯುವ ಸಂಯಮವಿಲ್ಲ? ಇನಸ್ಟಂಟ್ ಯಶಸ್ಸು ಅಥವಾ ಹೆಸರು ಅಷ್ಟೇ ಬೇಗ ಕರಗಿ ಹೋಗುತ್ತದಲ್ಲವೇ. ಅಂತಹ ಎಷ್ಟೊಂದು ಉದಾಹರಣೆಗಳಿವೆ ನಮ್ಮಲ್ಲಿ. ಎರಡು ವರ್ಷದ ಹಿಂದೆ ಸೋಷಿಯಲ್ ಮಿಡಿಯಾದಲ್ಲಿ ಯಾವಾವುದೋ ಕಾರಣಕ್ಕೆ ಅದೆಷ್ಟೋ ಜನ ಸುದ್ದಿಯಾಗಿದ್ದರು. ಅದರಲ್ಲಿ ಎ಼ಷ್ಟು ಜನರ ನೆನಪಿದೆ ನಮಗೆ? ಅದೇ ಎಸ್ ಪಿ ಬಿ, ರಾಜಕುಮಾರ, ತ್ರೀವೇಣಿ, ಬಿ ಕೆ ಎಸ್ ವರ್ಮಾ ಇವರ ಹೆಸರುಗಳನ್ನು ಮರೆಯಲಿಕ್ಕೆ ಸಾಧ್ಯವೇ ಇಲ್ಲ. ಅಲ್ಲವೇ..! ಕಾರಣ ಅವರು ತಮ್ಮ ಕ್ಷೇತ್ರದಲ್ಲಿ ತಪಸ್ಸು ಮಾಡಿದವರು. ಶ್ರದ್ಧೆಯಿಂದ ಧ್ಯಾನಿಸಿ ವರ ಪಡೆದುಕೊಂಡವರು. ಆ ಧ್ಯಾನ, ಶ್ರದ್ಧೆ, ಸಂಯಮ ನಮಗೆಲ್ಲರಿಗೂ ಬಹುಮುಖ್ಯವಾಗಿ ಬೇಕಾಗಿದೆ ಈಗ.
ನಮಗೆ ನಿರಾಶೆಯಾಗುವುದು ಯಾತಕ್ಕೆ ಎಂದು ಕಾರಣ ಹುಡುಕುತ್ತ ಹೊರಟರೆ ನಾವು ಬಂದು ತಲುಪುವುದು ನಮ್ಮ ನಿರೀಕ್ಷೆಗಳತ್ತ. ಅಂದುಕೊಂಡಂತೆ ಆಗದೇ ಇದ್ದಾಗ, ನಿರೀಕ್ಷಿಸಿದ್ದು ನಡೆಯದೇ ಹೋದಾಗ ಮನುಷ್ಯ ನಿರಾಶನಾಗುತ್ತಾನೆ. ಫಲಾಫಲಗಳನ್ನು ಅಪೇಕ್ಷಿಸದೆ ನಿನ್ನ ಕರ್ಮವನ್ನು ನೀನು ಮಾಡು ಎಂದು ಭಗವದ್ಗಿತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ. ಆದರೆ ನಾವೋ! ಒಂದು ಮರವನ್ನು ಸಹ ಮುಂದೊಂದು ದಿನ ಹೂವರಳಿಸೀತು, ಹಣ್ಣು ಕೊಟ್ಟೀತು ಎಂಬ ನಿರೀಕ್ಷೆಯಲ್ಲಿಯೇ ಬೆಳೆಸುತ್ತೇವೆ. ವೃದ್ಧಾಪ್ಯಕ್ಕೆ ಆಧಾರವಾಗಲಿ ಎಂದೇ ಮಕ್ಕಳನ್ನು ಹೊತ್ತು, ಹೆತ್ತು, ಸಾಕುತ್ತೇವೆ. ಮರವೇ ತನ್ನ ಹಣ್ಣುಗಳ ಮೇಲೆ ನಿರೀಕ್ಷೆಯಿಟ್ಟುಕೊಳ್ಳದೆ ಹೆಚ್ಚಾಗಿದ್ದನ್ನು ಉದುರಿಸುವಾಗ ಅದರ ಮೇಲೆ ಒಡೆತನವಿಟ್ಟು ಆಳಲಿಕ್ಕೆ ನಾವ್ಯಾರು? ಹರಿವ ನದಿಗೆ ಹೆಸರು ಕೊಟ್ಟು ಅದು ನನಗೆ ಸೇರಿದ್ದು ಎಂದು ಬೀಗಲಿಕ್ಕೆ ಯಾವ ದೇವರು ನಮಗೆ ಹಸ್ತಪ್ರತಿಯಲ್ಲಿ ರುಜು ಹಾಕಿ ಕೊಟ್ಟಿದ್ದಾನೆ?
ಬದುಕು ಬಹಳ ಸರಳ. ನೇರ ದಾರಿಯ ಪಯಣ. ಮುಂದಿನ ಜನ್ಮ ಇರಬಹುದು ಇಲ್ಲದಿರಬಹದು. ಹಿಂದಿನ ಜನ್ಮದ ಬಗ್ಗೆ ಯಾರಿಗೂ ಗೊತ್ತಿಲ್ಲ. ಈಗಿನ ಸತ್ಯ ಎಂದರೆ ಅದು ಈ ಜನ್ಮ ಮಾತ್ರ. ಅದು ನಮ್ಮ ಅಂಗೈಯಲ್ಲಿರುವ ಗುಬ್ಬಿ ಮರಿ. ಜೋರಾಗಿ ಅಮುಕಿ ಸತ್ತು ಹೋಗದಂತೆ, ಪೂರ್ತಿ ಸಡಿಲಿಸಿ ನಮ್ಮಿಂದಲೇ ಹಾರಿ ಹೋಗದಂತೆ ನೋಡಿಕೊಳ್ಳುವ ಜಾಣತನವನ್ನು ನಾವೆಲ್ಲ ಕಲಿಯಬೇಕಿದೆ. ತಿರುವಿನಲ್ಲಿ ಅದೇನಿದೆಯೋ ಎಂದು ಕೆಲವೊಮ್ಮೆ ಭಯವಾಗುತ್ತದೆ. ಆದರೆ ಮುನ್ನುಗ್ಗುವುದೇ ಜೀವನ. ಸರ್ರೋ ಭರ್ರೋ ಎಂದು ಓಡುತ್ತಿರುವ ಈ ಜಗತ್ತಿಗೆ ಮಧ್ಯದಲ್ಲಿ ಅಚಾನಕ್ಕಾಗಿ ನಿಂತು ಬಿಟ್ಟವರ ಪರಿವಿಲ್ಲ. ನಿಂತವರನ್ನು ದಬ್ಬಿ ಕೆಳಗೆ ದೂಡಿ ತುಳಿದು ಮುನ್ನುಗ್ಗುವ ಧಾವಂತ. ಆದ್ದರಿಂದ ತುಸು ನಿಧಾನವಾದರೂ ಅಡ್ಡಿಯಿಲ್ಲ. ನಿಲ್ಲದಿರೋಣ.